ಹೆದ್ದಾರಿ ಬದಿಗಳಲ್ಲಿದ್ದ ಜಾಹೀರಾತು ಫಲಕಗಳ ಏಕಾಏಕಿ ತೆರವು

ನೋಟಿಸ್ ನೀಡದೆ ಕ್ರಮ - ವ್ಯಾಪಾರಿಗಳ ಅಸಮಾಧಾನ 

ತಮ್ಮ ವ್ಯಾಪಾರ-ಉದ್ಯಮದ ಪ್ರಚಾರದ ಉದ್ದೇಶಕ್ಕಾಗಿ ಅಳವಡಿಸಿದ್ದ ಜಾಹೀರಾತು ಫಲಕಗಳನ್ನು ಸಂಬಂಧಂಪಟ್ಟವರ ಗಮನಕ್ಕೆ ತಾರದೆ ಏಕಾಏಕಿ ತೆರವು ಮಾಡಿದ ಕ್ರಮಕ್ಕೆ ವ್ಯಾಪಕ ಆಕ್ರೋಶ ವರ್ತಕರ ವಲಯದಿಂದ ವ್ಯಕ್ತವಾಗುತ್ತಿದೆ. 

ರಾಷ್ಟ್ರೀಯ ಹೆದ್ದಾರಿ-275ರ ಸಂಪಾಜೆಯಿಂದ ಕುಶಾಲನಗರ ತನಕದ 71 ಕಿ.ಮೀ. ವ್ಯಾಪ್ತಿಯ ರಸ್ತೆಯ ಇಕ್ಕೆಲಗಳಲ್ಲಿ ಅಳವಡಿಸಿದ್ದ ಸುಮಾರು 40ಕ್ಕೂ ಹೆಚ್ಚು ಜಾಹೀರಾತು ಫಲಕಗಳನ್ನು ಈಗಾಗಲೇ ಜೆಸಿಬಿ ಯಂತ್ರಗಳನ್ನು ಬಳಸಿ ಧ್ವಂಸ ಮಾಡಲಾಗಿದೆ. ಅನಂತರ ಪತ್ರಿಕಾ ಹೇಳಿಕೆಯನ್ನು ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿಡುಗಡೆ ಮಾಡಿದ್ದು, ‘ತೆರವುಗೊಳಿಸುವ ಮುನ್ನ ವರ್ತಕರಿಗೆ ನೋಟಿಸ್ ನೀಡಿ ಮಾಹಿತಿ ನೀಡಿದ್ದರೆ ನಾವೇ ಫಲಕಗಳನ್ನು ಸುರಕ್ಷಿತವಾಗಿ ತೆರವು ಮಾಡುತ್ತಿದ್ದೆವು. ಸಾವಿರಾರು ರೂಪಾಯಿ ವ್ಯಯಿಸಿ ಅಳವಡಿಸಿದ್ದ ಫಲಕಗಳು ಈ ಕ್ರಮದಿಂದ ಹಾಳಾಗಿವೆೆ. ಇದರ ನಷ್ಟ ಭರಿಸುವವರು ಯಾರು?’ ಎಂದು ವರ್ತಕರು, ಉದ್ಯಮಿಗಳು ಪ್ರಶ್ನಿಸುತ್ತಿದ್ದಾರೆ. 

ಈ ಕುರಿತು ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಗಿರೀಶ್ ಅವರು ಪ್ರತಿಕ್ರಿಯಿಸಿ, ಹೆದ್ದಾರಿ ಬದಿಗಳಲ್ಲಿ ಫಲಕಗಳನ್ನು ಅಳವಡಿಸಲು ಅವಕಾಶವಿರುವುದಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆ ಈ ಕ್ರಮಕೈಗೊಳ್ಳಲಾಗಿದೆ. ಸ್ಥಳೀಯ ಆಡಳಿತದಿಂದ ಅನುಮತಿ ಪಡೆದರೂ ಫಲಕವನ್ನು ಸ್ಥಳೀಯ ಸಂಸ್ಥೆಯ ‘ರೈಟ್ ಆಫ್ ವೇ’ ವ್ಯಾಪ್ತಿಯಲ್ಲಿ ಅಳವಡಿಸಬೇಕು. ಈಗಾಗಲೇ ಸುರಕ್ಷಿತವಾಗಿ ಫಲಕಗಳನ್ನು ತೆರವು ಮಾಡಿ ಅಲ್ಲಿಯೇ ಇಡಲಾಗಿದೆ. ಕೆಲವೊಂದು ಬ್ಯಾನರ್‌ಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಹೆದ್ದಾರಿ ಬದಿಯಲ್ಲಿ ಫಲಕ ಅಳವಡಿಸಲು ಯಾವುದೇ ಕಾರಣಕ್ಕೂ ಅನುಮತಿ ನಮ್ಮಿಂದ ನೀಡುವುದಿಲ್ಲ. ಮುಂದೆ ಯಾರೂ ಫಲಕ ಅಳವಡಿಸುವಂತಿಲ್ಲ. ಇದನ್ನು ತಿಳಿದುಕೊಳ್ಳಬೇಕು. ಮಾನವೀಯ ದೃಷ್ಟಿಯಲ್ಲಿ ಫಲಕ ತೆರವಿಗೆ ಆಗಸ್ಟ್ 31ರ ತನಕ ಗಡುವು ನೀಡಲಾಗಿದೆ. ಅನಂತರ ಉಳಿದ ಫಲಕ ತೆರವು ಮಾಡದಿದ್ದಲ್ಲಿ ಪೊಲೀಸ್ ಇಲಾಖೆ ಸಹಕಾರದೊಂದಿಗೆ ತೆರವು ಕಾರ್ಯ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. 

ಸ್ಥಳೀಯ ಆಡಳಿತವಾದ ಪಂಚಾಯಿತಿ, ನಗರಸಭೆ, ಪುರಸಭೆಯಲ್ಲಿ ಅನುಮತಿ ಪಡೆದರೂ ಈ ರೀತಿ ಕ್ರಮವಹಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದ್ದು, ಇದು ಗೊಂದಲಕ್ಕೂ ಕಾರಣವಾಗಿದೆ. 

ಸ್ಥಳೀಯ ಆಡಳಿತಕ್ಕೆ ಶುಲ್ಕ ಪಾವತಿಸಿ ಅನುಮತಿ ಪಡೆದೇ ವರ್ತಕರು ನಿಯಮಾನುಸಾರ ಹೆದ್ದಾರಿ ಬದಿಯಲ್ಲಿ ಫಲಕ ಅಳವಡಿಸಿರುತ್ತಾರೆ. ಆದರೆ, ಹೆದ್ದಾರಿ ಪ್ರಾಧಿಕಾರ ದಿಢೀರ್ ಈ ರೀತಿ ಕ್ರಮಕೈಗೊಂಡಿರುವುದು  ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.  ಈ ಕುರಿತು ಮಡಿಕೇರಿ ನಗರಸಭೆ ಪೌರಾಯುಕ್ತ ವಿಜಯ ಅವರನ್ನು ಸಂಪರ್ಕಿಸಿದ ಸಂದರ್ಭ ‘ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಇತರ ಸರಕಾರಿ ಅಧೀನದ ಸಂಸ್ಥೆಗಳು ಬ್ಯಾನರ್ ತೆರವು ಮಾಡಲು ಸೂಚಿಸಿದ್ದಲ್ಲಿ ತೆರವು ಮಾಡಬೇಕೆಂಬ ಷರತ್ತು ವಿಧಿಸಿಯೇ ಅನುಮತಿಯನ್ನು ನೀಡಲಾಗಿರುತ್ತದೆ’ ಎಂದು ತಿಳಿಸಿದ್ದಾರೆ.