ಜರ್ಮನ್ ತಂತ್ರಜ್ಞಾನದ ತಡೆಗೋಡೆಗೆ ಮತ್ತೆ ಟಾರ್ಪಲ್ ಆಸರೆ

ಮಳೆ ಭೀತಿಗೆ ಮುನ್ನೆಚ್ಚರಿಕೆ

ರೂ. 7 ಕೋಟಿ ವೆಚ್ಚದ ಯೋಜನೆಗೆ ಮಳೆ ನೀರಿನ ಭಯ!

ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತ ತಪ್ಪಿಸಬೇಕೆಂಬ ಉದ್ದೇಶದಿಂದ ಆರಂಭಗೊಂಡ ‘ಜರ್ಮನ್ ಟೆಕ್ನಾಲಜಿಯ’ ತಡೆಗೋಡೆ ಇದೀಗ ಮಳೆ ನೀರಿಗೆ ಭಯಪಡಬೇಕಾದ ಸ್ಥಿತಿಗೆ ತಲುಪಿದೆ. ರೂ. 7 ಕೋಟಿ ವೆಚ್ಚದ ಈ ಯೋಜನೆಗೆ ಬೃಹತ್ ಟಾರ್ಪಲ್ ಇದೀಗ ಆಸರೆಯಾಗಿದ್ದು, ‘ಲೇಟೆಸ್ಟ್ ಟೆಕ್ನಾಲಜಿಗೆ’ ಹಳೆ ಮಾದರಿಯ ಪರಿಹಾರೋಪಾಯಗತಿ ಎಂಬಂತಾಗಿದೆ.    

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಜಿಲ್ಲಾಡಳಿತ ಭವನದ ಎದುರಿನ ಬರೆಗೆ ಅಡ್ಡಲಾಗಿ ನಿರ್ಮಿಸಿದ್ದ ತಡೆ ಗೋಡೆ ಈಗಾಗಲೇ ತೆರವುಗೊಂಡು ಮರುನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಮಳೆರಾಯನ ದರ್ಶನ ಆಗಿ ಮುಂಗಾರು ಬಿರುಸು ಪಡೆಯುವ ಹೊಸ್ತಿಲಿನಲ್ಲಿ ಮುಂಜಾಗ್ರತವಾಗಿ ಟಾರ್ಪಲ್ ಮುಚ್ಚಿ ಕ್ರಮಕೈಗೊಳ್ಳಲಾಗಿದೆ.  2 ಮಳೆಗಾಲ ಕಳೆದು 3ನೇ ಮಳೆಗಾಲಕ್ಕೆ ಕಾಲಿಟ್ಟರೂ ಮುಕ್ತಾಯ ಕಾಣದ ತಡೆಗೋಡೆಗೆ ಟಾರ್ಪಲ್ ಆಸರೆಯಾಗಿದ್ದು, ಮಳೆ ನೀರು ನುಗ್ಗದಂತೆ ಬಿರುಸಿನ ಕೆಲಸ ನಡೆದಿದೆ. 

2019ರಲ್ಲಿ ನೈಸರ್ಗಿಕ ವಿಕೋಪ  ಸಂಭವಿಸಿದ ಸಂದರ್ಭ ಜಿಲ್ಲಾಡಳಿತ ಭವನ ಎದುರಿನ ಬರೆಯಿಂದ ಮಣ್ಣು ಕುಸಿದ ಪರಿಣಾಮ ಜೊತೆಗೆ ಕೆಳಗಿನ ರಸ್ತೆ ರಟಷ್ಟ್ರೀಯ ಹೆದ್ದಾರಿ 275 ಹಾದುಹೋಗುವ  ಹಿನ್ನೆಲೆ ಮುಂದಾಗಬಹುದಾದ ಅವಘಡ ತಪ್ಪಿಸಲು ಜರ್ಮನ್ ತಂತ್ರಜ್ಞಾನದ ‘ಆರ್.ಯು. ವಾಲ್’ ಯೋಜನೆಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿತ್ತು. ತಾ. 27-11-2019 ರಂದು ಪ್ರಕ್ರಿಯೆ ಆರಂಭಗೊಂಡು, ರೂ. 7 ಕೋಟಿ ಕ್ರಿಯಾಯೋಜನೆ ತಯಾರಿಸಿ ತಾ. 22-11-2020ಕ್ಕೆ ಕಾಮಗಾರಿ ಕಾರ್ಯಾದೇಶ ಗುತ್ತಿಗೆ ಪಡೆದ ಸಂಸ್ಥೆ ಮುಂದಿನ 11 ತಿಂಗಳೊಳಗೆ ಕಾಮಗಾರಿ ಮುಕ್ತಾಯಗೊಳಿಸುವ ಗಡುವು ನೀಡಿ  ಹಣವನ್ನು ಬಿಡುಗಡೆ ಗೊಳಿಸಲಾಗಿತ್ತು.  

ವಿವಾದಿತ ತಡೆಗೋಡೆ

ತ್ವರಿತವಾಗಿ ಆರಂಭಗೊಂಡ ತಡೆಗೋಡೆ ಕಾಮಗಾರಿ 2022ರ ಹೊತ್ತಿಗೆ ಪ್ಯಾನಲ್‌ಗಳನ್ನು ಅಳವಡಿಸಿ ಕೆಲಸ  ಒಂದು ಹಂತಕ್ಕೆ ಪೂರ್ಣಗೊಂಡು ಮೇಲ್ಭಾಗದಲ್ಲಿ ವಾಹನ ನಿಲುಗಡೆ ಉದ್ದೇಶಕ್ಕೆ ಕಾಂಕ್ರಿಟ್ ರಸ್ತೆ ನಿರ್ಮಿಸುವ ಕಾಮಗಾರಿ ಕೈಗೆತ್ತಿ ಕೊಳ್ಳಬೇಕು ಎನ್ನುವಷ್ಟರಲ್ಲಿ 2022ರ ಜುಲೈ ತಿಂಗಳಿನಲ್ಲಿ ಸುರಿದ ಭಾರಿ ಮಳೆ ಸಂದರ್ಭ ತಡೆಗೋಡೆಯ ಅಲ್ಲಲ್ಲಿ ಕಾಣಿಸಿಕೊಂಡ ಉಬ್ಬು, ಬಿರುಕುಗಳು ಆತಂಕ ಸೃಷ್ಟಿಗೆ ಕಾರಣವಾಗಿದ್ದವು. 

ಇದಾದ ನಂತರ ಯೋಜನೆ ಕಳಪೆ, ಭ್ರಷ್ಟಾಚಾರ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ, ಗುತ್ತಿಗೆ ಪಡೆದ ಸಂಸ್ಥೆಯ ವಿಳಂಬ, ಕರ್ತವ್ಯದಲ್ಲಿದ್ದ ಸಂಬಂಧಪಟ್ಟ ಅಧಿಕಾರಿಯ ಅಮಾನತ್ತು, ಹೀಗೆ ಹತ್ತುಹಲವು ವಿವಾದ ವನ್ನು ತಡೆಗೋಡೆ ತನ್ನ ಮೈಮೇಲೆ ಎಳೆದುಕೊಂಡಿತು. 

ರಾಷ್ಟ್ರೀಯ ಹೆದ್ದಾರಿ  275ಅನ್ನು ಹಾದುಹೋಗುವ ಈ ತಡೆಗೋಡೆ ಯಲ್ಲಿ 2022ರಲ್ಲಿ ಸಂಭವಿಸಿದ್ದ ಉಬ್ಬು, ಬಿರುಕಿಗೆ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ಕಾರಣ ಎಂದು ಮೇಲ್ನೋಟಕ್ಕೆ ಸಾಬೀತಾಗಿತ್ತು. ನಂತರ ಅಳವಡಿಸಿದ್ದ ಪ್ಯಾನಲ್‌ಗಳನ್ನು ಕಳಚಿ, ತಡೆಗೋಡೆಗೆ ವಿಶಾಲವಾದ ಟಾರ್ಪಲ್ ಹಾಕಿ ಜರ್ಮನ್ ತಂತ್ರಜ್ಞಾನಕ್ಕೆ ಅಧಿಕಾರಿಗಳು ಸವಾಲು ಹಾಕಿದ್ದರು. ಆದರೆ, ಮಳೆಯ ಆರ್ಭಟಕ್ಕೆ ಪ್ಲಾಸ್ಟಿಕ್‌ನಿಂದ ನೀರು ಸೋರಿಕೆಯಾಗಿ ಬರೆಯೊಳಗೆ ನುಗ್ಗಿ ತಡೆಗೋಡೆ ಯೋಜನೆ ಅಸಾಧ್ಯ ಎಂಬ ಪರಿಸ್ಥಿತಿಗೆ ತಲುಪಿತ್ತು. ಈ ನಡುವೆಯೂ ಗುತ್ತಿಗೆ ಪಡೆದ ಸಂಸ್ಥೆ ಮೂಲಕ ತಡೆಗೋಡೆ ಕೆಲಸ ಆಮೆಗತಿಯಲ್ಲಿ ಸಾಗುತಿತ್ತು. 

ಕಾಂಗ್ರೆಸ್ ಮುಖಂಡ ತೆನ್ನೀರ ಮೈನಾ ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಹಾಗೂ ಕಳಪೆ ಗುಣಮಟ್ಟದಲ್ಲಿ ಕೂಡಿದೆ ಎಂದು ಆರೋಪಿಸಿ ಇಲಾಖೆ ಅಧಿಕಾರಿ ವಿರುದ್ಧ ಲೋಕಾಯುಕ್ತ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರು. ಇತ್ತೀಚಿಗಷ್ಟೆ ಕರ್ನಾಟಕ ವಿಧಾನಸಭಾ ಅರ್ಜಿ ಸಮಿತಿ ಸದಸ್ಯರು ಭೇಟಿ ನೀಡಿ ವಾಸ್ತವ ಚಿತ್ರಣ ಪಡೆದುಕೊಂಡಿದ್ದರು.    

ಈ ವರ್ಷ ಮತ್ತೆ ತಡೆಗೋಡೆಗೆ ಮಳೆಯ ಭಯ ಕಾಡುತ್ತಿರುವ ಕಾರಣ ಈಗಾಗಲೇ ಪ್ಲಾಸ್ಟಿಕ್ ಟಾರ್ಪಲ್ ಹೊದಿಸಲಾಗಿದ್ದು, ಕಾಮಗಾರಿ ಕಥೆ ಮುಂದೇನು? ಎಂಬ ಪ್ರಶ್ನೆ ಉದ್ಭವಿ ಸುವಂತೆ ಮಾಡಿರುವುದಂತೂ ಸತ್ಯ.