ನಗರದ ರಸ್ತೆಗಳನ್ನು ಈಗಲ್ಲದೆ ಮಳೆಗಾಲದಲ್ಲಿ ಸರಿಪಡಿಸುತ್ತಿರೇನು...?

ಮಡಿಕೇರಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಯಾವುದರಲ್ಲಿ? ಪ್ರವಾಸೋದ್ಯಮ ವಲಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ನಗರದ ವಾಣಿಜ್ಯೋದ್ಯಮಕ್ಕೆ, ಸರಕಾರಕ್ಕೆ ಆದಾಯ ತರುತ್ತಿದೆ. ನಗರದ ಜನತೆಗೆ ನಗರಸಭೆ ವರ್ಷದಿಂದ ವರ್ಷಕ್ಕೆ ತೆರಿಗೆ ಹೆಚ್ಚಳ ಮಾಡುತ್ತ ಆದಾಯ ಸಂಗ್ರಹಿಸುತ್ತಿದೆ. ಆದರೆ, ನಗರದ ಜನತೆಗೆ ನಗರಸಭೆಯ ಕೊಡುಗೆ ಏನು? ನಗರದ ಬೆಳವಣಿಗೆಗೆ ಆಡಳಿತ ಏನು ಮಾಡುತ್ತಿದೆ?. ಎಲ್ಲಾ ಗುಂಡಿಮಯ, ಎಲ್ಲೆಲ್ಲೂ ಅಯೋಮಯ! ಅವಘಡಕ್ಕೆ ಕಾರಣವಾಗುವ ರಸ್ತೆ ದುರವಸ್ಥೆ ದೃಗ್ಗೋಚರ! ಹಾಗಿದ್ದರೆ ನಗರಸಭೆಯಲ್ಲಿ ಚರ್ಚೆಯಾಗುವ ವಿಷಯಗಳೇನು? ರಸ್ತೆ ವಿಷಯ ಬಿಟ್ಟು ಯರ್ಯಾರದ್ದೋ ವೈಯಕ್ತಿಕ ವಿಚಾರಗಳು, ಅದರಲ್ಲೂ ರಾಜಕೀಯ ಸಂಬಂಧಿತ ಆರೋಪ-ಪ್ರತ್ಯಾರೋಪಗಳು ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರವಾಗಿ ನಡೆದು ಮಾಧ್ಯಮಗಳಿಗೆ ಮಾತ್ರ “ಸೆನ್ಸೇಷನ್” ಸುದ್ದಿ ಮಾಡಲು ಉತ್ತಮ ದೃಶ್ಯಗಳು, ಮಾತುಗಳು ಹೊರಬೀಳುತ್ತವೆ. ಈ ಹಿಂದೆ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ರೂ. 40 ಕೋಟಿ ಲೆಕ್ಕ ತೋರಿಸಿ ನಗರದ ರಸ್ತೆಗಳನ್ನು ಅದೂ ಉತ್ತಮ ಸಿಮೆಂಟ್ ರಸ್ತೆಗಳನ್ನು ಅಗೆದು - ಬಗೆದು ಪೂರ್ಣ ಹಾಳುಗೆÀಡವಿ ಯೋಜನೆ ನಿಷ್ಕ್ರಿಯಗೊಂಡು ಸಂಬಂಧಿಸಿದವರೆಲ್ಲರೂ ತಿಂದು ತೇಗಿದ್ದಾಯಿತು! ನಗರ ನೀರು ಸರಬರಾಜು ಮಂಡಳಿ ಈ ಬಗ್ಗೆ ಇದುವರೆಗೆ ಬಿಡುಗಡೆಯಾದ ಹಣ, ನಡೆದ ಕೆಲಸ ಅದರ ಫಲಿತಾಂಶದ ಕುರಿತು ಮಾಹಿತಿ ನೀಡಲು ವಿಫಲಗೊಂಡಿದೆ. ಏಕೆಂದರೆ, ಈ ಯೋಜನೆ ನೆಲಕಚ್ಚಿದ್ದು ಇದ್ದ ಉತ್ತಮ ರಸ್ತೆಗಳನ್ನು ನಾಶಮಾಡಿ ನಾಗರಿಕರಿಗೆ ದ್ರೋಹವೆಸಗಿದೆ. ಇದೀಗ ಕೇಂದ್ರದ ಅಮೃತ್ -2 ಯೋಜನೆ ಹೆಸರಿನಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಕೈಗೊಳ್ಳುತ್ತಿರುವ ಕಾಮಗಾರಿಯನ್ವಯ ಅಲ್ಲಲ್ಲಿ ರಸ್ತೆಗಳನ್ನು ಅಗೆದು ಬಗೆದು ಇದ್ದ ಒಳ್ಳೆ ರಸ್ತೆಗಳನ್ನು ಚರಂಡಿಗಳಾಗಿ ಮಾಡಲಾಗಿದೆ. ಮೇಲ್ಭಾಗದಲ್ಲಿ ಕಲ್ಲುಗಳನ್ನು ಪೇರಿಸಿ ವಾಹನ ಸಂಚಾರ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಧಕ್ಕೆಯುಂಟು ಮಾಡಲಾಗಿದೆ. ಇದರ ಪ್ರಯೋಜನ ಏನು ? ಎಂದು ಹೇಳುವವರು ಕೇಳುವವರು ಇಲ್ಲವಾಗಿದ್ದಾರೆ. ಮಡಿಕೇರಿ ನಗರದಲ್ಲಿ ಬಹುತೇಕ ರಸ್ತೆೆಗಳು ನಗರಸಭಾ ಆಡಳಿತಕ್ಕೆ ಒಳಪಡುತ್ತವೆ, ಕೆಲವು ಪ್ರದೇಶದಲ್ಲಿ ಮಾತ್ರ ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಅಧೀನಕ್ಕೆ ಒಳಪಟ್ಟಿದೆ. ಆದರೆ, ಈ ಸಂಬಂಧ ಎಲ್ಲರನ್ನೂ ಸೇರಿಸಿ ರಸ್ತೆ ಕೆಲಸ ಮಾಡಬೇಕೆನ್ನುವ ಕುರಿತು ಆಡಳಿತ ಹಾಗೂ ಪ್ರತಿನಿಧಿಗಳು ಸಮರ್ಪಕವಾಗಿ ಚರ್ಚಿಸಿರುವುದು ಕಂಡುಬಂದಿಲ್ಲ. ಉಸ್ತುವಾರಿ ಸಚಿವರು ಬಂದಾಗ ಸಭೆಗಳಲ್ಲಿ ಭಾಗವಹಿಸಿ “ರಸ್ತೆ ದುರಸ್ತಿ ಮಾಡಿ” ಎಂದಷ್ಟೇ ಹೇಳಿ ಹೋಗುತ್ತಾರೆ. ಇದಕ್ಕೆ ಬೇಕಾದ ಹಣ ಮಂಜೂರಾತಿಯಾಗಲಿ, ಕಾರ್ಯನಿರ್ವಹಿಸಲ್ಪಡುತ್ತಿದೆಯೇ ಎಂದಾಗಲಿ ಪರಿಶೀಲಿಸುವ ಗೋಜಿಗೇ ಹೋಗುವುದಿಲ್ಲ. ಸಭೆಗಳಲ್ಲಿ ಪ್ರವಾಸೋದ್ಯಮ ಬೆಳವಣಿಗೆಯಾಗಬೇಕೆನ್ನುವ ಕುರಿತು ಎಲ್ಲರೂ ಮಾತನಾಡುತ್ತಾರೆ. ಪ್ರವಾಸೋದ್ಯಮ ಇಲಾಖೆ ಜಿಲ್ಲೆಗೆ ಎಷ್ಟು ಆದಾಯ ಬರುತ್ತದೆ ಎನ್ನುವ ಲೆಕ್ಕಾಚಾರಕ್ಕೆ ಸೀಮಿತವಾಗಿದೆಯೇ ಹೊರತು ಇನ್ಯಾವ ಜವಾಬ್ದಾರಿಕೆಯನ್ನೂ ನಿರ್ವಹಿಸುತ್ತಿಲ್ಲ. ಚೇಂಬರ್ ಆಫ್ ಕಾಮರ್ಸ್ ಸಂಘ-ಸಂಸ್ಥೆಗಳೂ ಪ್ರವಾಸೋದ್ಯಮ ವಿಭಾಗದಲ್ಲಿ ಅಗತ್ಯವಾಗಿ ಆಗಬೇಕಾದ ಅನುಕೂಲಗಳ ಬಗ್ಗೆ ಆಗ್ರಹ ಮಾಡದೆ ಮೌನ ವಹಿಸಿವೆ. ಸಭೆಗಳಲ್ಲಿ ಪದಾಧಿಕಾರಿಗಳು ಭಾಗವಹಿಸಿದರೂ ಹಿನ್ನೆಲೆಯಲ್ಲಿ ಸಕ್ರಿಯವಾಗಿ ಆಡಳಿತಕಾರರಿಗೆ ಒತ್ತಡ ಹೇರಬೇಕಾದ ಕೆಲಸ ನಡೆಯತ್ತಿಲ್ಲ.

ಪಾರ್ಕಿಂಗ್ ದುರವಸ್ಥೆ
ಈ ಹಿಂದಿನ ನಗರ ಸಭಾಧ್ಯಕ್ಷರು ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಐಬಿ ಬಳಿಯ ಜಾಗದಲ್ಲಿ ಯೋಜಿಸುವುದಾಗಿ ಘೋಷಿಸಿದ್ದರು. ಆದರೆ, ಕೆಲವು ಖಾಸಗಿ ವ್ಯಕ್ತಿಗಳ ಸ್ವಹಿತಾಸÀಕ್ತಿಯಿಂದ ಅದು ಸ್ಥಗಿತಗೊಂಡಿತು. ಬಳಿಕ ಕಾವೇರಿ ಕಲಾ ಕ್ಷೇತ್ರದ ಆವರಣದಲ್ಲಿಯೇ ಪಾರ್ಕಿಂಗ್ ಯೋಜನೆ ಮಾಡುವುದಾಗಿ ಘೋಷಿಸಿದ ಬಳಿಕ ಹಿಂದಿನ ಆಡಳಿತ ಕೊನೆಗೊಂಡು ಆಡಳಿತಾಧಿಕಾರಿ ನೇಮಕಗೊಂಡರು. ದೀರ್ಘ ಸಮಯದ ಬಳಿಕ ನಗರಸಭೆಗೆ ನೂತನ ಆಡಳಿತ ಮಂಡಳಿ ಆಯ್ಕೆಗೊಂಡಿದ್ದರೂ ನಗರದ ರಸ್ತೆ ದುರಸ್ತಿ ಬಗ್ಗೆಯಾಗಲಿ ಈ ಹಿಂದೆ ನಿರ್ಧರಿಸಿದ್ದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದರ ಬಗ್ಗೆಯಾಗಲೀ ತಲೆ ಕೆಡಿಸಿಕೊಂಡಿಲ್ಲ. ಸಭೆಗಳಲ್ಲಿ ಪ್ರಗತಿಗೆ ಸಂಬAಧಿತ ಚರ್ಚೆಗಳೇ ನಡೆಯದೆ ಸುಮ್ಮನೆ ಕಾಲಹರಣವಾಗುತ್ತಿದೆ. ಗಾಂಧಿ ಮೈದಾನದಲ್ಲಿ ವಾಹನಗಳನ್ನು ನಿಲುಗಡೆಗೊಳಿಸಬಾರದೆಂದು ಈಗಿನ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ. ಆದರೆ, ಬದಲೀ ವ್ಯವಸ್ಥೆ ಕೈಗೊಳ್ಳಲು ಅಥವಾ ಆ ಬಗ್ಗೆ ಚರ್ಚಿಸಲೂ ಕೂಡ ವಿಫಲಗೊಂಡಿದೆ. ಇದರಿಂದಾಗಿ ಪ್ರವಾಸಿಗರು ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ಅನೇಕರು ವಾಪಸ್ ತೆರಳುತ್ತಿರುವದು ಹಾಗೂ ಇನ್ನು ಹೆಚ್ಚಿನ ಮಂದಿ ಮಡಿಕೇರಿ ಬದಲು ಕುಶಾಲನಗರದಲ್ಲಿಯೇ ತಂಗುತ್ತಿ ರುವುದು ಕಂಡುಬAದಿದೆ.
ಇನ್ನೊಂದೆಡೆ ಇದೀಗ ಮಡಿಕೇರಿ ನಗರದ ಜನತೆ ರಸ್ತೆಯಲ್ಲಿ ತಿರುಗಾಡದಷ್ಟು ರಸ್ತೆಗಳ ದುರವಸ್ಥೆ ಕಂಡುಬAದಿದೆ. ಇದರೊಂದಿಗೆ ನಗರದ ಹಾಗೂ ಜಿಲ್ಲೆಯ ಜನತೆ ಕೂಡ ಎಲ್ಲಿಯೂ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಲಾಗದೆ ಪರದಾಡುತ್ತಿರುವುದು ನಿತ್ಯ ಗೋಚರವಾಗಿದೆ. ಇದರಿಂದ ವ್ಯಾಪಾರೋದ್ಯಮಕ್ಕೂ ತೀವ್ರ ತೊಡಕುಂಟಾಗುತ್ತಿದೆ.
ರಸ್ತೆ ದುರಸ್ತಿ ಬಗ್ಗೆ ಮೌನಾಚರಣೆ!
ರಸ್ತೆ ದುರಸ್ತಿ ವಿಚಾರದಲ್ಲಿ ಇದೀಗ ಮೌನ ವಹಿಸಿರುವ ನಗರಸಭೆ ಮಳೆಗಾಲದಲ್ಲಿ ಕೊಚ್ಚಿಹೋಗುವ ರಸ್ತೆ ಬದಿಯಲ್ಲಿ ಹಾಕಲಾಗಿರುವ ಮಣ್ಣು ಹಾಗೂ ಗುಂಡಿಗಳಲ್ಲಿ ನಿಲ್ಲುವ ನೀರನ್ನು ನೋಡಿಕೊಂಡು ಮಳೆಗಾಲ ಕಳೆದು ರಸ್ತೆ ದುರಸ್ತಿಗೊಳಿಸುವುದಾಗಿ ಪೊಳ್ಳು ಭರವಸೆ ನೀಡುತ್ತ ಕಾಲಹರಣ ಮಾಡುತ್ತದೆ. ಮಳೆಗಾಲ ಕಳೆದು ದಸರಾ ಬರುತ್ತಿದ್ದಂತೆ ಅಲ್ಲಲ್ಲಿ ತೇಪೆ ಹಾಕಿ ಗುತ್ತಿಗೆದಾರರಿಗೆ ಅಷ್ಟಿಷ್ಟು ಹಣ ನೀಡಿ ರಸ್ತೆ ಗುಂಡಿಗಳನ್ನು ತೇವಾಂಶದ ನಡುವೆಯೇ ಮುಚ್ಚಿಸುತ್ತದೆ. ಅದಾಗಿ ಒಂದು ವಾರದಲ್ಲಿಯೇ ಆ ಮುಚ್ಚಿದ ಗುಂಡಿಗಳು ಇನ್ನೂ ಹೆಚ್ಚಿಗೆ ತೆರೆಯಲ್ಪಟ್ಟು ಇದರ ಸೋಜಿಗವನ್ನು ನೋಡುತ್ತ ಮತ್ತೆ ನಗರಸಭೆ ಮೌನ ವಹಿಸುತ್ತದೆ. ಖರ್ಚು ತೋರಿಸಿದ ಹಣ ಪೋಲಾಗಿರುತ್ತದೆ.
ಇದೀಗ ಉತ್ತಮ ಹವೆಯಿದೆ. ರಸ್ತೆ ಕೆಲಸ ಮಾಡಲು ಅತ್ಯಂತ ಸಕಾಲ ಹಾಗೂ ಪ್ರಶಸ್ತವಾಗಿದೆ. ಆದರೆ ಈ ಬಗ್ಗೆ ನಗರಸಭೆ ತಲೆ ಕೆಡಿಸಿಕೊಳ್ಳ್ಳುವುದೇ ಇಲ್ಲ. ಬೆಳಿಗ್ಗೆ ಕಸ ತುಂಬಿಕೊಳ್ಳುವ ವಾಹನಗಳಲ್ಲಿ ಘೊಷಣೆ ಮಾತ್ರ ಕೇಳಿಬರುತ್ತದೆ.
“ನಾಗರಿಕರು ಸಕಾಲಕ್ಕೆ ತೆರಿಗೆ ಪಾವತಿಸದಿದ್ದರೆ ಕಟ್ಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು. ಹೀಗಾಗಿ ನಗರಸಭೆ “ಒನ್ ವೇ ಟ್ರಾಫಿಕ್”ನಲ್ಲಿ ನಡೆಯುತ್ತಿದೆ. “ನಮಗೆ ತೆರಿಗೆ ಕೊಡಿ, ನಾವು ನಿಮಗೆ ರಸ್ತೆಗಳ ಗುಂಡಿ ಕೊಡುತ್ತೇವೆ!” “ಗುಂಡಿ ರಸ್ತೆಗಳಲ್ಲಿ ಓಡಾಡಿ ಬಿದ್ದು ಹಾಳಾಗಿ” ಎಂಬುದೇ ನಗರಸಭೆಯ ಧ್ಯೇಯ ಧೋರಣೆ.
ಇಡೀ ನಗರವೇ ಗುಂಡಿಮಯ!
ಮಡಿಕೇರಿಯಲ್ಲಿ ಪ್ರವಾಸಿಗರು ಅಧಿಕ ಭೇಟಿ ನೀಡುವ ಕೇಂದ್ರವೆಂದರೆ ರಾಜಾಸೀಟು ಉದ್ಯಾನವನ. ನಗರದ ಜನತೆಯೂ ನಿತ್ಯ ವಾಕಿಂಗ್ಗೆ ತೆರಳುವ ಸ್ಥಳವೂ ಕೂಡ ರಾಜಾಸೀಟು. ಆದರೆ ರಾಜಾಸೀಟು ರಸ್ತೆ (ಮಹಾತ್ಮ ಗಾಂಧಿ ಹೆಸರಿನ ರಸ್ತೆ) ವಾಕಿಂಗ್ ಕೂಡ ಮಾಡಲಾರದಷ್ಟು ಹಾಳಾಗಿದೆ. ಅದೇ ರೀತಿ ಮತ್ತೊಂದು ಪ್ರವಾಸೋದ್ಯಮ ಕೇಂದ್ರವಾದ ಅಬ್ಬಿಫಾಲ್ಸ್ ರಸ್ತೆಯೂ ಹದಗೆಟ್ಟು ಹೋಗಿದೆ. ನಗರದ ಗೌಳಿ ಬೀದಿ, ಕಾನ್ವೆಂಟ್-ಮುತ್ತಪ್ಪ ದೇವಾಲಯ ರಸ್ತೆ, ರಾಣಿಪೇಟೆ-ಮುತ್ತಪ್ಪ ದೇವಸ್ಥಾನ ರಸ್ತೆ, ಅಬ್ಬಿಫಾಲ್ಸ್ ರಸ್ತೆ, ಎಫ್.ಎಂ.ಸಿ. ಕಾಲೇಜು ರಸ್ತೆ, ಹಿಲ್ ರಸ್ತೆ, -ಹೀಗೆ ದುರವಸ್ಥೆಯ ರಸ್ತೆಗಳ ಪಟ್ಟಿ ನಗರದಲ್ಲಿ ಸಾಕಷ್ಟಿದೆ. ಅಲ್ಲದೆ, ಒನ್ ವೇ ಆಗಿರುವ ಅಪ್ಪಚ್ಚು ರೈಸ್ ಮಿಲ್ ರಸ್ತೆಯಲ್ಲಿ ಒಂದೆಡೆ ರಿಲಯನ್ಸ್ ಮಳಿಗೆಗೆ ತೆರಳುವ ವಾಹನಗಳನ್ನು ಅಲ್ಲಲ್ಲ್ಲಿ ನಿಲ್ಲಿಸುತ್ತ್ತಿದ್ದು ಇನ್ನೊಂದು ಬದಿಯಲ್ಲಿ ಚೂಪಾದ ಜಲ್ಲಿಕಲ್ಲುಗಳೆಲ್ಲ ಎದ್ದು ಸಂಚರಿಸುವ ವಾಹನಗಳ ಟಯರ್ಗಳು ನಜ್ಜುಗುಜ್ಜುಗೊಳ್ಳುತ್ತಿರುವದು ನಿತ್ಯ ವಿದ್ಯಮಾನವಾಗಿದೆ. ಇವನ್ನೆಲ್ಲ ನೋಡಿಕೊಂಡು ನಗರಸಭೆ ನಿರ್ಲಿಪ್ತವಾಗಿ ಆಡಳಿತ ನಡೆಸುತ್ತಿದೆ. ಇನ್ನಾದರೂ ಈ ರಸ್ತೆ ದುರಸ್ತಿಗಾಗಿ ಚರ್ಚೆಗೆ, ನಿರ್ಧಾರ ಕೈಗೊಳ್ಳಲು ನಗರಸಭೆ ವಿಶೇಷ ಸಭೆ ಕರೆಯಲಿ. ಜಿಲ್ಲಾಧಿಕಾರಿಯವರೂ ಈ ದಿಸೆಯಲ್ಲಿ ಆಸಕ್ತಿ ವಹಿಸಲಿ. ಮಡಿಕೇರಿ ಕ್ಷೇತ್ರದ ಶಾಸಕರೂ ಕೊಡಗು ಜಿಲ್ಲೆಯ ಮುಖ್ಯ ಪಟ್ಟಣವಾದ ಮಡಿಕೇರಿ ನಗರ ಇದೆ ಎಂಬುದನ್ನು ಮರೆಯದೆÉ ವಿಶೇಷ ಗಮನಹರಿಸಲಿ.